ಕಣ್ಣು ಹಾಯಿಸಿದಷ್ಟು ಹಸಿರು ರಾಶಿ ಮಧ್ಯೆ ಬಳ್ಳಿಯಂತೆ ಬಂಡೆಗಳ ನಡುವೆ ಬಳುಕಿ ಬರುವ ಜಲಧಾರೆ ಸುತ್ತಲೂ ಹಸಿರ ಹೊದಿಕೆಯನ್ನು ಹೊತ್ತುಕೊಂಡು ನಿಂತಿರುವ ಪಶ್ಚಿಮಘಟ್ಟಗಳು, ಪ್ರಕೃತಿ ಪ್ರೀತಿಸುವವನಿಗೆ ಭೀಮೇಶ್ವರ ದೇವಸ್ಥಾನದ ಸುತ್ತಲಿನ ಗುಡ್ಡ ಬೆಟ್ಟಗಳ ಹಸಿರಿನ ವಾತಾವರಣವು ಸ್ವರ್ಗ ಲೋಕದಂತೆ ಕಾಣುತ್ತದೆ. 50 ಅಡಿ ಎತ್ತರದಿಂದ ಧೋ ಎಂದು ಹಾಲಿನ ನೊರೆಯಂತೆ ಸುರಿಯುವ ಜಲಪಾತ ನೋಡಲು ಬಹು ಮೋಹಕವಾಗಿದೆ.
ಪುರಾಣ ಕಥೆಗಳ ಪ್ರಕಾರ ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಭೀಮನು ಶಿವಲಿಂಗ ಮತ್ತು ದೇವಸ್ಥಾನವನ್ನು ನಿರ್ಮಿಸಿದನಂತೆ. ಆದ್ದರಿಂದ ಭೀಮೇಶ್ವರ ದೇವಸ್ಥಾನ ಎಂದು ಹೆಸರಿಡಲಾಗಿದೆ.
ದೇವಸ್ಥಾನವು ಸಾಗರ - ಭಟ್ಕಳ ರಸ್ತೆಯಲ್ಲಿ ಕೋಗಾರ್ ಕ್ರಾಸ್ ನಿಂದ 2.5 ಕಿ,ಮೀ ದೂರ ಬಲಬದಿಯಲ್ಲಿ ಭೀಮೇಶ್ವರ ದೇವಸ್ಥಾನಕ್ಕೆ ದಾರಿ ಎನ್ನುವ ನಾಮ ಫಲಕವಿದೆ ಇಲ್ಲಿಂದ 2 ಕಿ.ಮೀ ಗಳ ಕಾಡಿನ ಹಾದಿ.
ಕೂಸಳ್ಳಿಯಿಂದ ಹೊರಟಾಗ ಸಮಯ 4 ಗಂಟೆ ಯಾಗಿತ್ತು . ಇಲ್ಲಿಂದ ಭೀಮೇಶ್ವರಕ್ಕೆ 50 ಕಿ.ಮೀ ದೂರ. ತೂದಳ್ಳಿ ರಸ್ತೆ ಮುಖಾಂತರ ಸಾಗರ - ಭಟ್ಕಳ ಹೆದ್ದಾರಿ ತಲುಪಿದೆವು . ಇಲ್ಲಿ ಒಂದು ಟೀ ಬ್ರೇಕ್ ಗೆ ನಿಲ್ಲಿಸಿದೆವು. ಮಳೆಯಲಿ ಟೀ ಜೊತೆಗೆ ಬಿಸಿ ಬಿಸಿ ಆಲೂ ಬೊಂಡ ಅದ್ಬುತ !!! . ಮತ್ತೆ ನಮ್ಮ ಪಯಣ ಸುಂದರ ಹೆದ್ದಾರಿಯಲ್ಲಿ ಪ್ರಕೃತಿಯ ನಡುವೆ ಮುಂದುವರೆಯಿತು.
ನಾವು ಭೀಮೇಶ್ವರ ಕ್ರಾಸ್ ತಲುಪಿದಾಗ ಸಮಯ 6 ಗಂಟೆ ದಾಟಿತ್ತು , ಇಲ್ಲಿಂದ ಭೀಮೇಶ್ವರಕ್ಕೆ 2 ಕಿ.ಮೀ ಮಣ್ಣಿನ ರಸ್ತೆ , ಮಳೆ ಬರುತ್ತಿದ್ದರಿಂದ ಮಣ್ಣಿನ ರಸ್ತೆ ಕೆಸರು ಗದ್ದೆ ಯಾಗಿತ್ತು, ಇಲ್ಲಿ ಬೈಕ್ ಚಲಾಯಿಸುವುದು ಕಷ್ಟವಾಯಿತು. ಒಂದು ಹಂತದಲ್ಲಿ ಧನರಾಜ್ ಬೈಕ್ ಸ್ಕಿಡ್ ಆಯಿತು ಹಾಗೂ ಪ್ರಸನ್ನ ಬೈಕ್ ಸಂಪೂರ್ಣ ಹತೋಟಿ ಕಳೆದುಕೊಂಡಿತು ಆದರೆ ಯಾರಿಗೂ ಯಾವುದೇ ತೊಂದರೆಯಾಗಲಿಲ್ಲ. ಅಲ್ಲಿಂದ ಭೀಮೇಶ್ವರದ ಭಟ್ಟರ ಮನೆ ತಲುಪುವ ವೇಳೆಗೆ ಸಮಯ 7 ಗಂಟೆಯಾಗಿತ್ತು.
(ಮಳೆಗಾಲದಲ್ಲಿ ವಾಹನಗಳನ್ನು ಭೀಮೇಶ್ವರ ಕ್ರಾಸ್ ನಲ್ಲಿ ಬಿಟ್ಟು 2 ಕಿ.ಮೀ ನಡೆದು ಹೋಗುವುದು ಉತ್ತಮ)
ಭಟ್ಟರು ನಮ್ಮನ್ನು ಸ್ವಾಗತಿಸಿ ನಾವು ಉಳಿದುಕೊಳ್ಳಲು ಕೊಠಡಿ ತೋರಿಸಿದರು. ನಂತರ ಬಿಸಿ ಬಿಸಿ ಕಾಫಿ ತಂದು ಕೊಟ್ಟರು. ಬೆಳಿಗ್ಗೆಯಿಂದ ಮಳೆ ನೀರಲ್ಲಿ ಸ್ಥಾನ ಮಾಡಿದ್ದ ನಾವು ಈಗ ಬಿಸಿ ನೀರಿನ ಸ್ನಾನಕ್ಕೆ ಹೊರೆಟೆವು . ಸೌದೆ ಉಪಯೋಗಿಸಿ ಹಂಡೆ ಒಲೆಯಲ್ಲಿ ಖಾಯಿಸಿದ್ದ ನೀರು ತುಂಬಾ ಬಿಸಿಯಾಗಿತ್ತು. ಎಲ್ಲರೂ ಸ್ನಾನ ಮುಗಿಸುವ ವೇಳೆಗೆ ಸಮಯ 8.30 ನಿಮಿಷ , ಅಷ್ಟರಲ್ಲಿ ಭಟ್ಟರು ಊಟಕ್ಕೆ ಕರೆದರು. ಊಟಕ್ಕೆ ಅನ್ನ ಸಾಂಬಾರ್ ಪಲ್ಯ ಮತ್ತು ಮಜ್ಜಿಗೆ ತುಂಬಾ ಚೆನ್ನಾಗಿತ್ತು.
ಊಟದ ನಂತರ ಸ್ವಲ್ಪ ಸಮಯ ಹರಟೆಯ ನಂತರ ನಿದ್ದೆಗೆ ಜಾರಿದೆವು. ರಾತ್ರಿ ಮಳೆ ನಿರಂತರವಾಗಿ ಬರುತ್ತಿತ್ತು.
ಬೆಳಿಗ್ಗೆ 5 ಗಂಟೆಗೆ ಎದ್ದು ಎಲ್ಲರೂ ಸ್ನಾನ ಮುಗಿಸಿದೆವು ನಂತರ ಟೀ ಕುಡಿದು ದೇವಾಲಯದ ಕಡೆಗೆ ಹೊರೆಟೆವು . ಭಟ್ಟರ ಮನೆಯಿಂದ ದೇವಾಲಯಕ್ಕೆ 5 ನಿಮಿಷದ ಹಾದಿ, ಇಲ್ಲಿಂದ ಕ್ಯಾಮರಾದ ಕೆಲಸ ಶುರುವಾಯಿತು. ತುಂಬಾ ಪ್ರಾಚೀನ ಕಾಲದ ದೇವಾಲಯ ಅದರ ಪಕ್ಕದಲ್ಲೆ ಇರುವ ಜಲಪಾತ ಮನಮೋಹಕವಾಗಿತ್ತು. ಜಲಪಾತದ ಸೊಬಗನ್ನು ಕಣ್ತುಂಬಿಸಿಕೊಂಡೆವು.
ಅರ್ಚಕರು ಎಲ್ಲರಿಗೂ ಶಂಖ ಹಾಗೂ ಜಾಗಟೆ ಗಳನ್ನು ಕೊಟ್ಟರು , ಶಂಖ ಜಾಗಟೆ ಹಾಗೂ ಗಂಟೆಯ ನಾದದೊಂದಿಗೆ ಪೂಜೆ ನಡೆಯಿತು.
ಪೂಜೆ ಮುಗಿಸಿ ಭೀಮೇಶ್ವರನ ದರ್ಶನ ಮಾಡಿ ಜಲಪಾತದ ಫೋಟೋಗಳನ್ನು ತೆಗೆದು ಮತ್ತೆ ಭಟ್ಟರ ಮನೆ ತಲುಪಿದೆವು. ಬಿಸಿ ಬಿಸಿಯಾದ ಉಪ್ಪಿಟ್ಟು ನಮಗಾಗಿ ಕಾಯುತ್ತಿತ್ತು. ತಿಂಡಿ ತಿಂದು ಬ್ಯಾಗ್ ಗಳನ್ನು ತೆಗೆದುಕೊಂಡು ಭಟ್ಟರಿಗೆ ಧನ್ಯವಾದ ತಿಳಿಸಿ ಹೊರೆಟೆವು.
ಮಾಹಿತಿ : ಭೀಮೇಶ್ವರದಲ್ಲಿ ವಸತಿ ಮತ್ತು ಊಟದ ವ್ಯವಸ್ಥೆಗಾಗಿ
"ಯೋಜನೆ ಪ್ರಕಾರ ಇಲ್ಲಿಂದ ಮುಂದೆ ಹುಲಿಕಲ್ ಘಾಟ್ ಮುಖಾಂತರ ಮೆಟ್ಕಲ್ ಗಣಪತಿ ಗುಡ್ಡಕ್ಕೆ ಹೋಗುವುದು"