ಎರ್ಮಾಯಿ ಜಲಪಾತ


 ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲಿನ ಸಮೀಪದ  ಎರ್ಮಾಯಿ ಎಂಬಲ್ಲಿ ದಟ್ಟ ಕಾನನದ ನಡುವೆ ಪ್ರಶಾಂತ ವಾತಾವರಣದಲ್ಲಿರುವ ಈ ಜಲಪಾತ ಸುಮಾರು 80 ಅಡಿ ಎತ್ತರದಿಂದ ಕಲ್ಲು ಬಂಡೆಗಳ ನಡುವೆ ದುಮುಕಿ ಬರುವ  ಎರ್ಮಾಯಿ ಜಲಪಾತವನ್ನು ನೋಡುವುದೇ ಕಣ್ಣಿಗೊಂದು ಹಬ್ಬ.

ಎರ್ಮಾಯಿ ಜಲಪಾತದಷ್ಟೆ ಸುಂದರವಾಗಿದೆ ಜಲಪಾತಕ್ಕೆ ಸಾಗುವ ದಾರಿ, ದಟ್ಟ ಅರಣ್ಯದ ನಡುವೆ ಸಣ್ಣ ಪುಟ್ಟ ಹಳ್ಳ ತೊರೆ, ಸೇತುವೆಗಳನ್ನು  ದಾಟುತ್ತಾ ಸಾಗುವಾಗ ಸಿಗುವ ಖುಷಿಯನ್ನು ಅನುಭಸಿಯೇ ನೋಡಬೇಕು.

ಇಲ್ಲಿ ಕಿರು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು ವರ್ಷ ಪೂರ್ತಿ ಎರ್ಮಾಯಿ ಸುತ್ತ ಮುತ್ತಲಿನ ಮನೆಗಳಿಗೆ ವಿದ್ಯುತ್ ದೊರೆಕುತ್ತದೆ.

ಬೆಳ್ತಂಗಡಿ ಅಥವಾ ಉಜಿರೆ ಯಿಂದ ದಿಡುಪೆಗೆ ಹೋಗುವ ಬಸ್ಸಿನಲ್ಲಿ ಏರಿ ಕಾಜೂರಿನಲ್ಲಿ ಇಳಿದುಕೊಂಡು ಕಾಡು ದಾರಿಯಲ್ಲಿ 2 ಕಿ.ಮೀ ಸಾಗಿದರೆ ಎರ್ಮಾಯಿ ಜಲಪಾತದ ಮಡಿಲು ಸೇರಬಹುದು.

ನಾವು ಕಡಮಗುಂಡಿ ಜಲಪಾತದಿಂದ ವಾಪಸ್ ದಿಡುಪೆಗೆ ಬಂದು ಅಲ್ಲಿಂದ ಬಸ್ಸಿನಲ್ಲಿ ಕಾಜೂರಿಗೆ(2 ಕಿ.ಮೀ) ಬಂದಾಗ ಸಮಯ ಸುಮಾರು 1.30 ನಿಮಿಷ

ಇಲ್ಲಿಂದ ಕಚ್ಚಾರಸ್ತೆಯಲ್ಲಿ ಚಾರಣ ಶುರುವಾಯಿತು.





 ನಾವು ತಿಳಿದಿದ್ದ ಪ್ರಕಾರ ಈ ಜಲಪಾತಕ್ಕೆ ತುಂಬ ಸುಲಭವಾಗಿ ತಲುಪಬಹುದಿತ್ತು. ಆದರೆ 1 ಕಿ.ಮೀ ನಂತರ ಕಚ್ಚಾರಸ್ತೆ 2 ರಸ್ತೆಯಾಗಿ ಕವಲೊಡೆಯಿತು ಎಡಕ್ಕೆ ಮತ್ತೊಂದು ಬಲಕ್ಕೆ, ಬಲಕ್ಕೆ ಹೋಗುವ ರಸ್ತೆ ಚೆನ್ನಾಗಿದ್ದ ಕಾರಣ ನಾವು ಬಲಭಾಗದ ರಸ್ತೆ ಆಯ್ಕೆ ಮಾಡಿದೆವು (ಆದರೆ ಸರಿಯಾದ ದಾರಿ ಎಡಭಾಗದ ಏರು ರಸ್ತೆ , ಈ ರಸ್ತೆಯಲ್ಲಿ 300 ಮೀ ನಡೆದು ಮತ್ತೆ ಎಡಕ್ಕೆ ಸಿಗುವ ಕಾಲುದಾರಿಯಲ್ಲಿ 10 ನಿಮಿಷ ನಡೆದರೆ ಜಲಪಾತ ತಲುಪಬಹುದು ಇದು ತಿಳಿದಿದ್ದು ಜಲಪಾತದಿಂದ ಹಿಂದಿರುಗುವಾಗ) , ನಾವು ಬಲಭಾಗದ ಕಚ್ಚಾರಸ್ತೆ ಸುಮಾರು 30 ನಿಮಿಷ ನಡೆದರು ಜಲಪಾತ ಸೂಚನೆ ಸಿಗಲಿಲ್ಲ, ಕಚ್ಚಾರಸ್ತೆ ತುಂಬಾ ಏರು ರಸ್ತೆಯಾಗಿತ್ತು. ನಾವು ತಪ್ಪು ದಾರಿಯಲ್ಲಿ ಬಂದಿರುವ ಅನುಮಾನ ಶುರುವಾಯಿತು, ವಿಚಾರಿಸಲು ಯಾವುದೇ ಮನೆಗಳು ಸಿಗಲಿಲ್ಲ ಬೇರೆ ದಾರಿಯಿಲ್ಲದೆ ಅದೇ ದಾರಿಯಲ್ಲಿ ಮುಂದುವರೆದೆವು, ಬಂದು ನೀರಿನ ತೊರೆ ಸಿಕ್ಕಿತು 




ಅದನ್ನು ದಾಟಿ ಮುಂದೆ ಹೋಗುತ್ತಿರುವಾಗ ಊರಿನವರು ಸಿಕ್ಕಿ ನಾವು ತಪ್ಪು ದಾರಿಯಲ್ಲಿ ಬಂದಿರುವುದನ್ನು ಖಚಿತಪಡಿಸಿದರು. ನಾವು ತುಂಬಾ ದೂರ ಬಂದಿರುವುದಾಗಿ ತಿಳಿಸಿದರು. ನಮ್ಮನ್ನು ಸಲ್ಪ ದೂರ ವಾಪಸ್ ಕರೆದುಕೊಂಡು ಬಂದು ಬಲಕ್ಕೆ ಒಂದು ಕಾಲು ದಾರಿ ತೋರಿಸಿ ಈ ದಾರಿಯಲ್ಲಿ ಹೋಗಿ ನೀರಿನ ತೊರೆ ದಾಟಿ  ಎಡಕ್ಕೆ ಬಂಡೆಗಳನ್ನು ಇಳಿದರೆ ಜಲಪಾತಕ್ಕೆ ತಲುಪಬಹುದೆಂದು ತಿಳಿಸಿದರು. ಈ ದಾರಿಯಲ್ಲಿ ಸಾಗುವಾಗ ಮೊದಲ ಹಂತದ ಜಲಪಾತಕ್ಕೆ ಬಂದಿದ್ದೆವು, 


ಅದನ್ನು ದಾಟಿ ಎಡಕ್ಕೆ ಜಾರುವ ಬಂಡೆಗಳನ್ನು  ಇಳಿದು  ಇನ್ನೊಂದು ಜಲಪಾತದ ಹತ್ತಿರ ಬಂದೆವು ಇದು 2ನೇ ಹಂತ , ಈ ಜಲಪಾತದ ಮುಂದೆ ನೀರಿನ ಕೊಳ ಜಾಸ್ತಿ ಆಳ ಇರಲಿಲ್ಲ ಮತ್ತು ಈಜಲು ಕೊಳ ತುಂಬಾ ಚೆನ್ನಾಗಿತ್ತು, 





ಅರ್ಧ ಗಂಟೆ ನೀರಿನಲ್ಲಿ ಕಳೆದು ಇಲ್ಲಿಂದ ಕೆಳಗೆ ಕಾಲುದಾರಿಯಲ್ಲಿ ಇಳಿದಾಗ , ನಮಗೆ ಎದುರಾಗಿದ್ದು ಕೊನೆಯ ಹಂತದ  ಎರ್ಮಾಯಿ ಜಲಪಾತ, ಈ ಜಲಪಾತ ನೋಟ ಅಧ್ಬುತವಾಗಿತ್ತು . 



ಸಣ್ಣ ಪೋಟೊ ಸೇಷನ್ ಮುಗಿಸಿ ವಾಪಸ್ ಬರುವಾಗ ತಿಳಿಯಿತು ನಾವು ಹೋಗುವಾಗ ದಾರಿ ತಪ್ಪಿದ್ದು ಎಲ್ಲಿ ಎಂದು.  ಆದರೆ ಸುಲಭವಾದ ಚಾರಣವನ್ನು ಸಾಹಸಮಯವಾಗಿ ಮತ್ತು ಚೈತನ್ಯಮಯವಾಗಿ ಮಾಡಿದ ಅನುಭವವಾಯಿತು.




ಅನಡ್ಕ / ಕಡಮಗುಂಡಿ ಜಲಪಾತ (Anadka/Kadamagundi Falls)

ಅನಡ್ಕ ಜಲಪಾತಕ್ಕೆ ಇನ್ನೊಂದು ಹೆಸರು ಕಡಮಗುಂಡಿ ಜಲಪಾತ ಬೆಳ್ತಂಗಡಿ ತಾಲ್ಲೂಕಿನ ದಿಡುಪೆ ಗ್ರಾಮದಿಂದ 4 ಕಿ.ಮೀ ದೂರದಲ್ಲಿದೆ. ದಿಡುಪೆಯಿಂದ ಈ ಜಲಪಾತಕ್ಕೆ  3 ಕಿ.ಮೀ ಕಚ್ಚಾ ರಸ್ತೆಯಿದೆ, ಈ ರಸ್ತೆಯಲ್ಲಿ ಜೀಪುಗಳಿಗೆ ಮಾತ್ರ ಓಡಾಡಲು ಸಾಧ್ಯ ಆದ್ದರಿಂದ ನಡೆದು ಕೊಂಡು ಹೋಗುವುದು ಸೂಕ್ತ. ಈ ರಸ್ತೆಯಲ್ಲಿ ನಡೆದು ಕೊಂಡು ಹೋಗುವಾಗ ಎಡಕ್ಕೆ ಕಾಣುವ ಕುದುರೆಮುಖದ ಗಿರಿ ಶಿಖರಗಳ ದೃಶ್ಯ ಅದ್ಬುತ. ಈ ಕಚ್ಚಾ ರಸ್ತೆಯ ಕೊನೆಯ ಮನೆಯವರ ಅನುಮತಿ ಪಡೆದು ಅವರ ತೋಟದಲ್ಲಿ 1/2 ಕಿ.ಮೀ ನಡೆದರೆ ಸುಂದರವಾದ ಅನಡ್ಕ ಜಲಪಾತ ಸಿಗುತ್ತದೆ.


DAY 2 (14 Aug 2016)


  ಬೆಳಗ್ಗೆ 5.30 ಕ್ಕೆ ಎದ್ದು ಸ್ನಾನ ಮುಗಿಸಿ ಎಲ್ಲರೂ ರೆಡಿಯಾಗಿ ಸಹ್ಯಾದ್ರಿಯ ಕೊಠಡಿ ಖಾಲಿ ಮಾಡಿ ಬ್ಯಾಗ್ ಗಳೊಂದಿಗೆ ಉಜಿರೆ ತಲುಪಿದಾಗ ಸಮಯ 7.00 ಗಂಟೆ. ದಿಡುಪೆಗೆ ಮೊದಲ ಬಸ್ 7.30ಕ್ಕೆ, ಹೋಟೆಲ್ ನಲ್ಲಿ ಉಪಹಾರ ಮುಗಿಸಿ ಮದ್ಯಾಹ್ನಕ್ಕೆ ಪಲಾವ್ ಪಾರ್ಸಲ್ ಮಾಡಿಸಿಕೊಂಡೆವು ಮತ್ತು ಜಿಗಣೆಗಳಿಂದ ರಕ್ಷಣೆ ಪಡೆಯಲು ಉಪ್ಪು, ನಶ್ಯ ಮತ್ತು ಕೊಬ್ಬರಿ ಎಣ್ಣೆ ಖರೀದಿಸಿದೆವು. ದಿನಕರ್ ಪ್ರಯತ್ನದಿಂದ ನಮ್ಮಲ್ಲಿದ್ದ ಲಗೇಜ್ ಬ್ಯಾಗ್ ಗಳನ್ನು ಹೋಟೆಲ್ ಕಾಮದೇನುವಿನಲ್ಲಿ ಇಡಲು ಅವಕಾಶ ದೊರೆಯಿತು. ಬ್ಯಾಗ್ ಹೋಟೆಲಿನಲ್ಲಿ ಇಟ್ಟು ಬಸ್ ನಿಲ್ದಾಣಕ್ಕೆ ಬಂದಾಗ ಸಮಯ 7.30 ಬಸ್ ಇನ್ನು ಬಂದಿರಲಿಲ್ಲ , ದಿಡುಪೆ ಬಸ್ ಬಂದಾಗ ಸಮಯ 7.50. ಸುಮಾರು ಅರ್ಧ ಗಂಟೆ ಪ್ರಯಾಣದ ನಂತರ ಬಸ್ ಕೊನೆಯ ನಿಲ್ದಾಣ ದಿಡುಪೆಯ ಹೋಟೆಲ್ ಒಂದರ ಮುಂದೆ ನಿಂತಿತು. ಅರಣ್ಯ ಇಲಾಖೆಯ ರಾಜು ರವರು ಇಲ್ಲೆ ಅಂಗಡಿಯಲ್ಲಿ ಇರುತ್ತಾರೆ ಎಂದು ಚಾಲಕರು ತಿಳಿಸಿದರು. ನಾವು ಬಸ್ಸಿನಿಂದ ಇಳಿದು ಅರಣ್ಯ ಇಲಾಖೆಯವರ ಬಳಿ ಹೋದಾಗ ತಿಳಿಯಿತು ಅರಣ್ಯ ಇಲಾಖೆಯ ರಾಜುರವರು ದಿನಕರನ ಸಹಪಾಠಿಗಳು. ನಮ್ಮ ಅರ್ಧ ಕೆಲಸ ಸುಲಭವಾಯಿತು ಏಕೆಂದರೆ ಈ ಜಲಪಾತಕ್ಕೆ ಹೋಗಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಾಗಿತ್ತು. ರಾಜುರವರು ಅತ್ಯಂತ ಉತ್ಸಾಹದಿಂದ ನಮಗೆ ಜಲಪಾತಕ್ಕೆ ಹೋಗುವ ಮಾರ್ಗದ ಬಗ್ಗೆ ವಿವರಿಸಿ ಒಂದು ನಕ್ಷೆ ಬರೆದು ಕೊಟ್ಟರು.ರಾಜುರವರಿಂದ  ನಕ್ಷೆ ಪಡೆದು ಪಕ್ಕದಲ್ಲಿದ್ದ ಹೋಟಲಿನಲ್ಲಿ ಟೀ ಕುಡಿದು ಚಾರಣ ಶುರು ಮಾಡಿದೆವು. ಮುಖ್ಯರಸ್ತೆಯಿಂದ 3 ಕಿ.ಮೀ ವರೆಗೂ ಕಚ್ಚಾ ರಸ್ತೆಯಿದೆ, ಆದರೆ ಈ ರಸ್ತೆಯಲ್ಲಿ ಜೀಪುಗಳು ಕೂಡ ಹೋಗುವುದು ಕಷ್ಟ.











 ಮದ್ಯೆ ಸಾಕಷ್ಟು ತಿರುವುಗಳು ಇದ್ದವು ಆದರೆ ರಾಜು ಬರೆದು ಕೊಟ್ಟಿದ್ದ ನಕ್ಷೆ ಇದ್ದದ್ದರಿಂದ ಯಾವುದೇ ಅನುಮಾನ ಇಲ್ಲದೆ ಅವರು ತಿಳಿಸಿದ್ದ ಜೋಡಿ ಮನೆ ತಲುಪಿದೆವು. ಈ ಜಲಪಾತಕ್ಕೆ ಅವರ ಮನೆಯ ತೋಟದ ಮುಖಾಂತರ ಹೋಗಬೇಕಾಗಿತ್ತು, ಮೊದಲು ಮನೆಯವರು ಅನುಮತಿ ಕೊಡಲು ನಿರಾಕರಿಸಿದರು ನಂತರ ರಾಜುರವರ ಹೆಸರು ಹೇಳಿದ ಮೇಲೆ ಅನುಮತಿ ಕೊಟ್ಟು ಸ್ವಲ್ಪ ದೂರದವರೆಗೂ ದಾರಿ ತೋರಿಸಲು ಅವರ ಮಗನನ್ನು ಜೊತೆಯಲ್ಲಿ ಕಳುಹಿಸಿದರು.ಆ ಹುಡುಗನು ಸ್ವಲ್ಪ ದೂರ ಬಂದು ಮುಂದೆ ಕಾಣುವ ಕಾಲುದಾರಿಯಲ್ಲಿ  ಹೋಗಬೇಕೆಂದು ತಿಳಿಸಿ ಹಿಂದಿರುಗಿದನು.











ಇಲ್ಲಿಂದ ಜಿಗಣೆಗಳ ಹಾವಳಿ ಶುರುವಾಯಿತು. ನಾವು ತಂದಿದ್ದ ಶಸ್ತ್ರಾಸ್ತ್ರಗಳನ್ನು (ಉಪ್ಪು ಮತ್ತು ನಶ್ಯದ ಪುಡಿ) ಕಾಲಿಗೆ ಹಚಿಕೊಂಡೆವು. ಸಲ್ಪ ದೂರ ನಡೆದ ಮೇಲೆ ಒಂದು ದೊಡ್ಡ ನೀರಿನ ತೊರೆ (ನೀರು ಮಂಡಿವರೆಗೂ ಇತ್ತು)  ದಾಟಿದೆವು 





 ದಾಟಿದ ತಕ್ಷಣ ಎದುರಿಗೆ ಪ್ರತ್ಯಕ್ಷವಾದದ್ದು ಸುಂದರ ಜಲಪಾತ, ಸುಮಾರು 100 ಅಡಿಗಳ ಎತ್ತರದಿಂದ ರಭಸದಿಂದ ಧುಮುಕುತ್ತಿದ್ದ ನೀರ ಧಾರೆ ಆ ಸ್ಥಳದಿಂದ ಕಣ್ಣ ದೃಷ್ಠಿ ಕದಲದಂತೆ ಮಾಡಿತ್ತು. 



ಬಂಡೆಗಳು ತುಂಬಾ ಜಾರುತ್ತಿದ್ದವು ನಿಧಾನವಾಗಿ ಜಲಪಾತದ ಹತ್ತಿರ ಬರುವ ಹೊತ್ತಿಗೆ ಜಲಪಾತದಿಂದ ಹಾರಿ ಬಂದ ಹನಿಗಳು ನಮ್ಮನ್ನೆಲ್ಲ ಒದ್ದೆ ಮಾಡಿತ್ತು . ಜಲಪಾತದ ನೇರ ಕೆಳಕ್ಕೆ ಹೋದೆವು, ಮೈ ಕೈಗಳಿಗೆ ಮಸಾಜ್ ಮಾಡಿದ ಅನುಭವವಾಯಿತು, ಜಲಪಾತ ನೀರಿನಲ್ಲಿ ಮಿಂದೆದ್ದು ಕ್ಯಾಮರಾಗೆ ಫೋಸ್ ಕೊಟ್ಟೆವು. 










ಅಷ್ಟೊತ್ತಿಗೆ ಹೊಟ್ಟೆ ಖಾಲಿಯಾಗಿತ್ತು , ಉಜಿರೆಯಿಂದ ತಂದಿದ್ದ ಪಲಾವ್ ಮತ್ತು ಚಿಪ್ಸ್ ನ್ನು ಬಂಡೆಗಳ ಮೇಲೆ ನಿಂತು ತಿಂದು ಮುಗಿಸಿದೆವು. ಸಮಯ ಆಗಲೇ 12 ಗಂಟೆಯಾಗಿತ್ತು , ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಹೊರೆಟೆವು ಬರುವಾಗ ತೋಟದ ಮನೆಯವರಿಗೆ ತಿಳಿಸಿ ಮತ್ತೆ ಅದೇ ಕಚ್ಚಾ ರಸ್ತೆಯಲ್ಲಿ 3 ಕಿ.ಮೀ ನಡೆದು ದಿಡುಪೆಯ ಹೋಟೆಲ್ ಗೆ ಬಂದಾಗ ಸಮಯ 1 ಗಂಟೆ










.ಆಗ ತಾನೆ ಬಸ್ಸು ದಿಡುಪೆಗೆ ಬಂದು ನಿಂತಿತ್ತು, ಚಾಲಕರು ಮತ್ತು ನಿರ್ವಾಹಕರು ಹೋಟೆಲಿನಲ್ಲಿ ಊಟಕ್ಕೆ ಕುಳಿತ್ತಿದ್ದರು, ನಾವು ಮತ್ತೊಂದು ಸುತ್ತು ಊಟ ಮಾಡಿದೆವು (ಊಟದ ಮೆನು : ಕುಸುಲಕ್ಕಿ ಅನ್ನ ಜೊತೆ ಸಿಗಡಿ ಮೀನು ಸಾರು ಜೊತೆಗೆ ಆಮ್ಲೆಟ್). ನನ್ನದು ಶುದ್ದ ಸಸ್ಯಹಾರಿ ಮೆನು. ಅಷ್ಟರಲ್ಲಿ ಚಾಲಕರ ಊಟವು ಮುಗಿದಿತ್ತು ಬಸ್ಸು ಉಜಿರೆ ಕಡೆಗೆ ಹೊರಟಿತು ನಾವು ಮುಂದೆ ಕಾಜೂರಿನಲ್ಲಿ ಇಳಿದು ಕೊಂಡೆವು.

             "ನಮ್ಮ ಮುಂದಿನ ಪಯಣ ಎರ್ಮಾಯಿ ಜಲಪಾತಕ್ಕೆ"


ವಿನಂತಿ : ಯಾವುದೇ ಪ್ರಕೃತಿ ಪ್ರವಾಸಿ ತಾಣಗಳಿಗೆ ಹೋದಾಗ ಉಪಯೋಗಿಸಿದ ಪ್ಲಾಸ್ಟಿಕ್ ಕವರನ್ನು ಅಲ್ಲೆ ಬಿಡದೆ ತಮ್ಮ ಜೊತೆಯಲ್ಲಿ ತರುವುದರಿಂದ ಪ್ರಕೃತಿಯ ಸೌಂದರ್ಯ ಹಾಗೆ ಉಳಿಯುತ್ತದೆ. 


ಮಾರ್ಗಸೂಚಿ : ದಿಡುಪೆಯ ಹೋಟೆಲ್ ಪಕ್ಕದ ಕಚ್ಚಾ ರಸ್ತೆಯಲ್ಲಿ  ಹೊಗುವಾಗ ಮೊದಲು ಒಂದು ಚಿಕ್ಕ ಸೇತುವೆ ಸಿಗುತ್ತದೆ ನಂತರ ಸಲ್ಪ ದೂರ ಸಿಮೆಂಟ್ ರಸ್ತೆ ಸಿಗುತ್ತದೆ ನಂತರ ಮತ್ತೊಂದು ಸೇತುವೆ ನಂತರ ಮತ್ತೆ  ಸಿಮೆಂಟ್ ರಸ್ತೆ  ಸಿಗುತ್ತದೆ ಸಿಮೆಂಟ್ ರಸ್ತೆ ಮುಗಿದ ಮೇಲೆ ಎಡಕ್ಕೆ ಒಂದು ವಿದ್ಯುತ್ ಕಂಬ ಸಿಗುತ್ತದೆ ಅದರ ಮೇಲೆ ಜಲಪಾತಕ್ಕೆ ದಾರಿ ಎಂದು ಬರದಿದೆ ಈ ರಸ್ತೆಯಲ್ಲಿ 10 ನಿಮಿಷ ಮುಂದುವರೆದರೆ ಎಡಕ್ಕೆ ಒಂದು ಮನೆ ಮುಂದೆ ಸಿಮೆಂಟ್ ಟ್ಯಾಂಕ್ ಇದೆ , ಈ ಮನೆಯ ವಿರುದ್ದ ದಿಕ್ಕಿನಲ್ಲಿ ಇನ್ನೊಂದು ಮನೆ ಇದೆ , ಈ ಮನೆಯವರ ತೋಟದ ಕಾಲು ದಾರಿ ನೇರ ಜಲಪಾತಕ್ಕೆ ಸಾಗುತ್ತದೆ. (ಕಚ್ಚಾ ರಸ್ತೆಯಲ್ಲಿ ಸುಮಾರು ತಿರುವಗಳು ಸಿಗುತ್ತವೆ ಆದರೆ ಮುಖ್ಯರಸ್ತೆಯಲ್ಲಿಯೆ ಸಾಗಬೇಕು)

ಕೊಣಾಜೆ ಕಲ್ಲು

ಮೂಡಬಿದರೆಯಿಂದ ಶಿರ್ತಾಡಿ ಹೋಗುವ ದಾರಿಯಲ್ಲಿ ಪಡುಕೊಣಜೆ ಗ್ರಾಮವಿದೆ , ಇಲ್ಲಿಂದ  ಎಡಕ್ಕೆ  ಬೃಹದಾಕಾರದ ಜೋಡಿ ಕಲ್ಲುಗಳು ಕಾಣುತ್ತವೆ ಇದೆ ಕೊಣಾಜೆ ಕಲ್ಲು. 200 ಅಡಿಗಳ ಎತ್ತರದಲ್ಲಿ ಸುಂದರ ಕಾಡಿನ ನಡುವೆ ಸಾಗುವ ದಾರಿಯಲ್ಲಿ ಮೇಲೆ ಹತ್ತಿದರೆ  ಪ್ರಶಾಂತ ಅರಣ್ಯದ ನಡುವೆ  ಇರುವ ಕೊಣಾಜೆ ಕಲ್ಲಿನ ಪಾದದ ಅಡಿಯ ಗುಹೆಯೆ ಶ್ರೀ ಶಾರದಾದಾಸರ ಆಶ್ರಮ (ಸಿದ್ದಾಶ್ರಮ). ಅಲ್ಲಿಂದ ಮುಂದೆ ಕೊಣಾಜೆ ನೆತ್ತಿಯ ದಾರಿ.

ನಾನು ಮತ್ತು ದಿನಕರ್ ಧರ್ಮಸ್ಥಳದಿಂದ ಉಜಿರೆಗೆ ತಲುಪಿದೆವು, ಧನರಾಜ್ ಚಿಕ್ಕಮಗಳೂರಿಂದ ಉಜಿರೆಗೆ ಬಂದು ತಲುಪಿದಾಗ ಸಮಯ 11 ಗಂಟೆ. ಉಜಿರೆಯಿಂದ ಬೆಳ್ತಂಗಡಿಗೆ ತೆರಳಿ ಅಲ್ಲಿಂದ ಮೂಡಬಿದರೆಗೆ ಪ್ರಯಾಣ ಬೆಳೆಸಿದೆವು. ಸುಮಾರು 1 ಗಂಟೆ ಪ್ರಯಾಣದ ನಂತರ 12.30 ನಿಮಿಷಕ್ಕೆ ಮೂಡಬಿದರೆ ತಲುಪಿದೆವು. ಬಸ್ ನಿಲ್ದಾಣದ ಪಕ್ಕದ ಹೋಟೆಲ್ ನಲ್ಲಿ ಊಟ ಮುಗಿಸಿ ಮೂಡಬಿದರೆಯಿಂದ ಸುಮಾರು 6 ಕಿ.ಮೀ ದೂರವಿರುವ ಪಡುಕೊಣಾಜೆ ಗ್ರಾಮಕ್ಕೆ ಬಸ್ಸಿನಲ್ಲಿ ತೆರಳಿದೆವು. ಅಲ್ಲಿಂದ ಎಡಕ್ಕೆ ಡಾಂಬರು ರಸ್ತೆಯಲ್ಲಿ 1/2 ಕಿ.ಮೀ ನಡೆದು ಕೊಣಾಜೆ ಕಲ್ಲಿನ ಹತ್ತಿರ ತಲುಪಿದೆವು.











 ಇಲ್ಲಿಂದ ಮುಂದೆ ಸುಂದರ ಕಾಡಿನ ಕಾಲುದಾರಿ. 







ಸುಮಾರು 30 ನಿಮಿಷಗಳ ಚಾರಣದ ನಂತರ ಬೃಹತ್ ಬಂಡೆಗಳ ಸಮೀಪ ತಲುಪಿದೆವು. ಬಂಡೆಗಳ ಪಾದದ ಅಡಿಯ ಗುಹೆಯೆ ಸಿದ್ದಾಶ್ರಮ, ಸಿದ್ದಾಶ್ರಮ ವಿಶಾಲವಾಗಿ ಮತ್ತು ಪ್ರಶಾಂತವಾಗಿತ್ತು. ಸಿದ್ದಾಶ್ರಮದಲ್ಲಿ ಯಾರು ಇರಲಿಲ್ಲ. ನಮ್ಮನ್ನು ಸ್ವಾಗತಿಸಿದ್ದು ಒಂದು ಕೋತಿ ಮತ್ತು ಮತ್ತೊಂದು ಬೆಕ್ಕು.









   
   ಸಿದ್ದಾಶ್ರಮದಲ್ಲಿ ಸ್ವಲ್ಪ ಸಮಯ ಕಳೆದೆವು ನಂತರ ಆಶ್ರಮದ ಮುಂಭಾಗದಲ್ಲಿ  ಎಡಕ್ಕೆ ಇರುವ ಕಾಲುದಾರಿಯಲ್ಲಿ ಕೊಣಾಜೆ ಕಲ್ಲಿನ ತುದಿಯ ಕಡೆ ಹೊರೆಟೆವು. ಮೊದಲ ಬಂಡೆಯನ್ನು ಏರಿದೆವು ಇಲ್ಲಿಂದ ಸುತ್ತಲಿನ ಪ್ರದೇಶವು ಹಸಿರಿನಿಂದ ಕಂಗೊಳಿಸುತ್ತಿತ್ತು. 










ಚಿಕ್ಕ ಪೋಟೋ ಸೇಷನ್ ನಂತರ ಮತ್ತೆ ಮೇಲೆ ಹತ್ತಲು ಶುರು ಮಾಡಿದೆವು . ಕಾಲುದಾರಿಯಲ್ಲಿ ಗಿಡ ಬಳ್ಳಿಗಳ ಮಧ್ಯೆ ನಡೆದು ಹೋಗುವುದು ತುಂಬಾ ಸಾಹಸಮಯವಾಗಿತ್ತು. ಈ ಕಾಲುದಾರಿಯು ಎರಡು ಬೃಹತ್  ಬಂಡೆಗಳ ಮಧ್ಯೆ ಮುಗಿಯಿತು ಇಲ್ಲಿಂದ ಮುಂದೆ ಯಾವುದೇ ದಾರಿ ಇರಲಿಲ್ಲ, ಬಂಡೆಗಳ ಮೇಲೆಲ್ಲ ಪಾಚಿ ಕಟ್ಟಿ ಗಿಡಗಳು ಬೆಳೆದಿದ್ದವು ನೋಡಲು ಆಕರ್ಷಕವಾಗಿತ್ತು





ಇಲ್ಲಿಂದ ಕೆಳಗೆ ಬರುವಾಗ  ಎಡಭಾಗದಲ್ಲಿ ದೊಡ್ಡ ಬಂಡೆ ಕಾಣಿಸಿತು ಈ ಬಂಡೆಯನ್ನು ನಾಲ್ಕು ಕಾಲುಗಳಲ್ಲಿ ಏರಿ ತುದಿ ತಲುಪಬಹುದಿತ್ತು ಆದರೆ ಈಗಾಗಲೇ ಸಮಯವಾಗಿದ್ದರಿಂದ ಆ ಯೋಜನೆ ಕೈಬಿಟ್ಟು ಸಿದ್ದಾಶ್ರಮದ ಕಡೆಗೆ ಹೊರೆಟೆವು. ಸಿದ್ದಾಶ್ರಮದಲ್ಲಿ ಇನ್ನು ಯಾರು ಬಂದಿರಲಿಲ್ಲ, ಸಿದ್ದಾಶ್ರಮದಿಂದ ಕೆಳಗೆ ಇಳಿಯುತ್ತಿರುವಾಗ ಸಿದ್ದಾಶ್ರಮದಲ್ಲಿ ನೆಲೆಸಿರುವ ಶ್ರೀ ಎಂ ಎನ್ ಶಾಂತಿರವರು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬೆಟ್ಟ ಏರುತ್ತಿದ್ದರು, ನಮ್ಮನ್ನು ನೋಡಿ ಮಾತನಾಡಿಸಿದರು ಇನ್ನೊಮ್ಮೆ ಬನ್ನಿ ಈ ಕ್ಷೇತ್ರದ ಮಹಿಮೆ ವಿವರಿಸುವುದಾಗಿ ತಿಳಿಸಿ ಮೊಬೈಲ್ ನಂ ಕೊಟ್ಟರು. ನಾವು ಅವರನ್ನು ಬಿಳ್ಕೊಟ್ಟು ಕೆಳೆಗೆ ಇಳಿದೆವು.




ಅಲ್ಲಿಂದ ಮುಖ್ಯರಸ್ತೆಗೆ ಬಂದು ಅಂಗಡಿಯಲ್ಲಿ ತಂಪು ಪಾನೀಯ ಕುಡಿದು 10 ನಿಮಿಷ ವಿಶ್ರಾಂತಿ ಪಡೆದೆವು ಅಷ್ಡರಲ್ಲಿ ಮೂಡಬಿದರೆ ಬಸ್ ಬಂತು ಬಸ್ಸಿನಲ್ಲಿ ಬೆಳ್ತಂಗಡಿ ಮೂಲಕ ವಾಪಸ್ ಧರ್ಮಸ್ಥಳಕ್ಕೆ ಬಂದು ಸೇರಿದಾಗ ಸಮಯ 6 ಗಂಟೆಯಾಗಿತ್ತು , ಅಲ್ಲಿಂದ ಸಹ್ಯಾದ್ರಿ ತೆರಳಿ ಪ್ರೆಶ್ ಆಗಿ ಮತ್ತೊಮ್ಮೆ ಮಂಜುನಾಥನ ದರ್ಶನಕ್ಕೆ ಹೋದೆವು ಈಗ ಸಾಲಿನಲ್ಲಿ ತುಂಬಾ ಜನ ಇದ್ದರು. ದರ್ಶನ ಮುಗಿಸಿ ಪ್ರಸಾದಾಲಯದಲ್ಲಿ ಊಟ ಮುಗಿಸಿ ಕೊಠಡಿಗೆ ಬಂದಾಗ ಸಮಯ ರಾತ್ರಿ 9.45

ಮಾಹಿತಿ : ಕೊಣಾಜೆ ಕಲ್ಲಿನ ಸಿದ್ದಾಶ್ರಮದಲ್ಲಿ ನೆಲೆಸಿರುವ ಶ್ರೀ ಎಂ ಎನ್ ಶಾಂತಿ ಅವರ ಮೊಬೈಲ್ ಸಂಖ್ಯೆ : 9449895313

ನಾಳಿನ ಕಾರ್ಯಕ್ರಮಗಳ ಬಗ್ಗೆ ಮಾತುಕತೆ ನಡೆಸಿ ಬೆಳಗ್ಗೆ 5.30 ಕ್ಕೆ  ಏಳುವುದೆಂದು ತೀರ್ಮಾನಿಸಿ ನಿದ್ದೆಗೆ ಜಾರಿದೆವು.

       "ನಾಳಿನ ನಮ್ಮ ಪಯಣ ಅನಡ್ಕ ಜಲಪಾತಕ್ಕೆ"